Thursday, July 24, 2008

Govt Gift

ರಾಜ್ಯ ಸರಕಾರ ಈ ಸಾಲಿನ ಬಜೆಟ್ಟಿನಲ್ಲಿ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದೆ. ರೈತರಿಗೆ ಇದು ಸರಕಾರದ ಬಹುದೊಡ್ಡ ಬಳುವಳಿ ಎನ್ನಲಾಗುತ್ತಿದೆ. ಎಷ್ಟು ದೂರದೃಷ್ಟಿಯುಳ್ಳ ಬಳುವಳಿ ಇದು? ನಿಜವಾಗಲೂ ಕಾಳಜಿಯ ಬಳುವಳಿಯೇ? ಎಂದು ಈ ಲೇಖನದಲ್ಲಿ ಪ್ರಶ್ನಿಸುತ್ತಾರೆ ಸುಗ್ಗಿ.

“ಒಲೆಗೆ ಉರುವಲು ಇಲ್ಲ ಎಂದು ಕಲ್ಪವೃಕ್ಷವನ್ನು ಕಡಿವರುಂಟೆ...?”
ಇಂಥದೊಂದು ಉದಾಹರಣೆ ಆ ಆಧುನಿಕ ಸಂದರ್ಭ ಕಾಣಬೇಕು ಎಂದರೆ ಕರ್ನಾಟಕಕ್ಕೆ ಬನ್ನಿ. ಬಜೆಟ್ ನೋಡಿ.
ರೈತರ ಅಧಿನಾಯಕನೆಂದೇ ಕರೆಸಿಕೊಳ್ಳಲು ಖುಷಿ ಪಡುವ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ರೈತರಿಗೆ ಬಹುದೊಡ್ಡ ಬಳುವಳಿ ನೀಡಿದ ನೆಮ್ಮದಿಯಲ್ಲಿದ್ದಾರೆ. ಆದರೆ, ಅವರ ಈ ಆಶಯ ದೂರದೃಷ್ಟಿಯುಳ್ಳದ್ದೇ ಎಂಬುದು ನಿಜಕ್ಕೂ ವಿಚಾರ ಮಾಡಬೇಕಾದ ವಿಷಯ.

ನಿಜ, ರೈತರು ಕಷ್ಟದಲ್ಲಿದ್ದಾರೆ. ರೈತರಿಗೆ ನೆರವು ನೀಡಲೇಬೇಕು. ಮುಖ್ಯಮಂತ್ರಿಗಳ ಈ ಯೋಜನೆ ರೈತರ ಪರ ನಿಲುವೇನೋ ಸರಿ. ಆದರೆ, ಇದರ ದೂರಗಾಮಿ ಪರಿಣಾಮ ಜೀವ ವಿರೋಧಿಯೂ ಆಗಿರುವುದು ದುರಂತ. ಇಂದಿನ ಬವಣೆಗೆ ನೀಗಿಸಿಕೊಳ್ಳುವ ಭರದಲ್ಲಿ ಭವಿಷ್ಯದ ಬೊಕ್ಕಸಕ್ಕೆ ಬೊಕ್ಕೆ ಹಾಕುವುದು ಸರಿಯೇ? ಮುಖ್ಯಮಂತ್ರಿಗಳ ಈ ಕ್ರಮ ಭವಿಷ್ಯದ ರೈತಾಪಿ ಕುಲಕ್ಕೆ ಕಂಟಕವಾಗುವುದರಲ್ಲಿ ಸಂದೇಹವಿಲ್ಲ.

ಇಷ್ಟೆಲ್ಲಾ ಹೇಳಬೇಕಾಗಿ ಬಂದಿದ್ದು ರೈತರಿಗೆ ಉಚಿತ ವಿದ್ಯುತ್ತು ನೀಡಲು ಸರ್ಕಾರ ಮುಂದೆ ಬಂದಿದ್ದರಿಂದ.

ಈ ಯೋಜನೆ ಕಾರ್ಯಸಾಧುವಲ್ಲ, ಎಂಬುದು ಈಗಾಗಲೇ ಹಲವಾರು ಬಾರಿ, ಹಲವಾರು ರಾಜ್ಯಗಳಲ್ಲಿ –ನಮ್ಮ ರಾಜ್ಯವೂ ಸೇರಿದಂತೆ, ಸಾಬೀತಾಗಿದೆ. ಈ ಯೋಜನೆಯನ್ನು ವಿರೋಧಿಸುತ್ತಿರುವವರೂ, ವಿದ್ಯುತ್ ಸಮಸ್ಯೆ, ಬೊಕ್ಕಸಕ್ಕೆ ಭಾರ ಎಂದೆಲ್ಲಾ ಕಾರಣ ಕೊಡುತ್ತಿದ್ದಾರೆ. ಅದು ನಿಜವೂ ಇರಬಹುದು. ಆದರೆ, ಬಹುಮುಖ್ಯ ಮೂಲ ಕಾರಣವೊಂದು ಹಿನ್ನೆಲೆಯಲ್ಲೇ ಉಳಿದು ಬಿಟ್ಟಿದೆ. ಅದು ಅಂತರ್ಜಲ.